ಮಾನ್ಸೂನು

ಚಿಮಣಿಯಿಂದ
ಬುಸು
ಬುಸು
ಹೊಗೆ
ಒಲೆಯ ಮುಂದೆ
ಕುಕ್ಕರುಗಾಲು ಹಾಕಿದ
ಅಪ್ಪ
ಹೊರಗೆ
ಪಿರಿ
ಪಿರಿ
ಮಳೆ
ಜಾರುವ ಪಾಚಿಹಾದಿ
ವಾರೆ ಸುರುಳಿ
ಕಣ್ಣೊಳಗೆ ಹಸಿರು
ಚಳಿಯ ಧ್ಯಾನಿಸುತ್ತ
ಒದ್ದೆ ಸೌದೆಯ ವಾಸನೆ
ಸೇದುತ್ತ
ಇದ್ದರೆ
ಏನೇನೊ ಜ್ಞಾಪಕ
ತವಕ.

ಪುಟ್ಟ ತರಲೆ ಹುಡುಗಿ
ತುಡುಗು
ಮಾಡುವ
ಹಾಗೆ
ಅ  ತ್ತಿಂ   ದಿ   ತ್ತ
ಗೂರಾಡುವ
ಬಿಳಿಹೊಗೆ
ಮಾಡಿಂದ
ಸುರಿವ
ನೀರಪರದೆ
ಮತ್ತೆಲ್ಲ
ಮೌನವಾದರು
ಮನಕ್ಕೆ
ಮಳೆ
ವೀಣೆ
 

Comments (12)

‘ಅಗ್ನಿಯ ನದಿ’ ಆನಿ ಆಪಾ

ನನ್ನ ‘ಆನಿ’ ಆಪಾ (ಆಪಾ - ಅಕ್ಕ) ತೀರಿಹೋಗಿ ಹತ್ತಿರ ಹತ್ತಿರ ಒಂದು ವರುಷ ಕಳೆಯಿತು.  ಇನ್ನೂ ನೆನಪಿದೆ ಆ ದಿನ ನನಗೆ. ಅಮ್ಮ ಫೋನು ಮಾಡಿ ‘ಕುರ್ರತುಲೈನ್ ಹೈದರ್ ಹೋಗಿಬಿಟ್ರಲ್ಲ!!’ ಎಂದು ಪೇಚಾಡಿಕೊಂಡರು. ನಾನು ಸುಮ್ಮನೆ ಕಟ್ಟೆಯ ಮೇಲೆ ಕುಳಿತು ಆಗೀಗ ಇಣುಕುತ್ತಿದ್ದ ಬಿಸಿಲು ಕಾಯಿಸಲು ಹವಣಿಸುತ್ತ ಇದ್ದೆ. ನನ್ನವ ‘ಅಲ್ಲ, ನಿಂಗೆ ಏನೂ ಅನ್ನಿಸ್ತ ಇಲ್ವ?’ ಎಂದು ಟೀಕಿಸಿದ. ಅವರಾರೂ ‘ಆನಿ’ ಆಪಾ ಬರೆದಿರುವುದನ್ನು ಓದಿಲ್ಲ. ಆದರೆ ಆಕೆಯ ಪುಸ್ತಕಗಳ ಬಗ್ಗೆ ನನಗಿರುವ ಪ್ರೀತಿ, ಹುಚ್ಚು ಅವರಿಗೆ ತಿಳಿದಿದೆ. ತೇಜಸ್ವಿಯವರು ತೀರಿಕೊಂಡ ದಿನ ಕಾಲುಸುಟ್ಟ ಬೆಕ್ಕಿನ ಹಾಗೆ ನಾನು ಓಡಾಡಿರುವುದನ್ನು ನೋಡಿರುವ ಅವರಿಗೆ ನಾನು ಹಾಗೆ ನಿರುಮ್ಮಳವಾಗಿ ಇರುವುದು ನೋಡಿ ಹೇಗೆಹೇಗೊ ಅನ್ನಿಸಿರಬೇಕು.

ಉರ್ದುಸಾಹಿತ್ಯದ ಮಹಾರಥಿ ಲೇಖಕಿಯೆಂದು ಪರಿಗಣಿಸಲಾಗಿರುವ ಕುರ್ರತುಲೈನ್ ಹೈದರರನ್ನು ಎಲ್ಲರು ಪ್ರೀತಿಯಿಂದ ಕರೆಯುತ್ತಿದ್ದಿದ್ದೆ ‘ಆನಿ ಆಪಾ’ ಎಂದು. ನಾವು ಮಿಲನ್ ಕುಂದೇರಾ, ಗೇಬ್ರಿಯೆಲ್ ಗಾರ್ಸಿಯಾ ಮಾರ್ಕ್ವೆಜ್, ಮ್ಯಾಜಿಕ್ ರಿಯಲಿಸಂ ಎಂದೆಲ್ಲ ಹೇಳಿಕೊಂಡು ಓಡಾಡುತ್ತೇವೆ. ಮಾರ್ಕ್ವೆಜನ ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’ ಬಗ್ಗೆ ಅಕೆಡೆಮಿಕ್ಕಾಗಿ ಮಾತಾಡಿಕೊಳ್ಳುತ್ತೇವೆ. ಹಿಸ್ಪಾನಿಕ್ ಸಾಹಿತ್ಯಕ್ಕೆ, ಮತ್ತು ವಿಶ್ವಸಾಹಿತ್ಯಕ್ಕೆ ಮಾರ್ಕ್ವೆಜ್ ನೀಡಿದ ಅತ್ಯಪೂರ್ವ ಕೊಡುಗೆಯೆಂದು 1967ರಲ್ಲಿ ಹೊರಬಂದ ‘ಒನ್ ಹಂಡ್ರೆಡ್..’ ಅನ್ನು ಕೊಂಡಾಡಲಾಗುತ್ತದೆ. ಆದರೆ 1959ರಲ್ಲಿಯೆ ಕುರ್ರತುಲೈನ್ ಉರ್ದುವಿನಲ್ಲಿ ಬರೆದ ‘ಆಗ್ ಕಾ ದರಿಯಾ’ ಎಂಬ ಬೃಹತ್ ಕಾದಂಬರಿಯಲ್ಲಿ ಮ್ಯಾಜಿಕ್ ರಿಯಲಿಸಮ್ಮಿನ ಜತೆಗೇ ಉತ್ತಮವಾದ ಹೊಳಹುಗಳಿವೆ. ಓದುತ್ತ ಹೋದಂತೆ ಮಾರ್ಕ್ವೆಜನೇ ಬಹುಶಃ ಆಕೆಯಿಂದ ಪ್ರಭಾವಿತನಾಗಿದ್ದನೇನೊ ಎನ್ನುವಂತೆ ಭಾಸವಾಗುತ್ತದೆ! ಈ ಕಾದಂಬರಿಯನ್ನು ಬಹಳಕಾಲ ಯಾರಿಂದಲು ಭಾಷಾಂತರಿಸಲೂ ಸಾಧ್ಯವಾಗಲಿಲ್ಲ. 1998ರಲ್ಲಿ ಹೈದರ್ ತಾವೆ ಕೂತುಕೊಂಡು ಇದನ್ನು ಆಂಗ್ಲಕ್ಕೆ ‘ರಿವರ್ ಆಫ್ ಫೈರ್’ ಆಗಿ ಅನುವಾದಿಸಿ ಪ್ರಕಟಿಸಿದರು. ಆಗ ಎಲ್ಲರಿಗು ಆಕೆ ರಚಿಸಿದ ಸಾಹಿತ್ಯದ ಆಳ, ಮಹತ್ವ ಅರಿವಾಯಿತು. ’ನಮ್ಮ ಪ್ರಾದೇಶಿಕ ಭಾಷೆಗಳ ಸಾಹಿತ್ಯ ಎಷ್ಟೊಂದು ಸಮೃದ್ಧವಾಗಿದೆ! ಆದರೆ ಆಂಗ್ಲಭಾಷೆಯಲ್ಲಿ ಬರೆದವರಿಗೆ ದೊರಕುವ ಮಾನ್ಯತೆ ಇತರ ಭಾರತೀಯ ಭಾಷೆಗಳ ಬರಹಗಾರರಿಗೆ ದೊರಕುವುದೇ ಇಲ್ಲ. ಎಲ್ಲ ಮಲತಾಯಿ ಧೋರಣೆ!” ಎಂದು ನನ್ನ ಹಿರಿಯ ಸ್ನೇಹಿತರೊಬ್ಬರು ಆಗಾಗ ಬೇಸರಿಸುತ್ತ ಇರುತ್ತಾರೆ ಮತ್ತು ಇದು ನಿಜ ಕೂಡ.

ಕುರ್ರತುಲೈನ್ ಹೈದರ್ ಹುಟ್ಟಿದ್ದು 1927ರ ಆಧುನಿಕ ಲಿಬರಲ್ ಮುಸ್ಲಿಂ ಕುಟುಂಬವೊಂದರಲ್ಲಿ. ತಂದೆತಾಯಿ ಇಬ್ಬರೂ ಕಾದಂಬರಿಕಾರರು. ಮನೆಯಲ್ಲಿ ತುಂಬಿತುಳುಕುತ್ತ ಇದ್ದ ಸಾಹಿತ್ಯಾಸಕ್ತಿ. ತಂದೆಯ ವರ್ಗಾವಣೆಯ ಕೆಲಸದಿಂದಾಗಿ ಹೈದರ್ ತನ್ನ ಬಾಲ್ಯ ಮತ್ತು ಹರೆಯದ ಹೆಚ್ಚುಸಮಯವನ್ನು ಭಾರತದ ಎಲ್ಲೆಡೆ ಕಳೆದರು. ಕೊನೆಗೆ ಲಖನೌನ ಪ್ರತಿಷ್ಠಿತ ‘ಇಸಬೆಲ್ಲಾ ಥೋಬರ್ನ್’ ಕಾಲೇಜಿಗೆ ಸೇರಿದ ಹೈದರ್ ತನ್ನ ಸೌಂದರ್ಯ, ಆಧುನಿಕ ವಿಚಾರಧಾರೆ ಮತ್ತು ಶಿಫಾನ್ ಸೀರೆಗಳಿಂದ ಕ್ಯಾಂಪಸಿನಲ್ಲಿ ವಿಖ್ಯಾತರಾದರು. ಉರ್ದು ಸಾಹಿತ್ಯದಲ್ಲಿ ‘ಆಧುನಿಕ ಯುವತಿ’ಯನ್ನು ಗ್ಲಾಮರಿನೊಂದಿಗೆ ಪರಿಚಯಿಸಿದ್ದು ಈಕೆಯೆ. ಪಾರ್ಟಿಶನ್ನಿನ ಸಮಯದಲ್ಲಿ ಪಾಕಿಸ್ತಾನಕ್ಕೆ ಹೋಗಿ ನೆಲೆಸಿದ ಕುರ್ರತುಲೈನ್ ಗೆ ಅಲ್ಲಿ ಬಹಳಕಾಲ ಇರಲಾಗಲಿಲ್ಲ. ಬ್ರಿಟನ್ನಿಗೆ ಹೋಗಿ ಅಲ್ಲಿ ಸಾಹಿತ್ಯ, ರೇಡಿಯೊ ಎಂದು ಕೆಲವು ಸಮಯವಿದ್ದ ಆಕೆ ಮರಳಿದ್ದು ತನ್ನ ನೆಚ್ಚಿನ ಭಾರತಕ್ಕೆ. ಇದೇ ಸಮಯದಲ್ಲಿ ಬರೆದ ‘ಆಗ್ ಕಾ ದರಿಯಾ’ದಲ್ಲಿ ನಮ್ಮ ದೇಶದ ಸಂಸ್ಕೃತಿ, ಪರಂಪರೆಗಳ ನಿರಂತರ ಹರಿವೇ ಮುಖ್ಯ ವಸ್ತುವಾಗಿದೆ. ಕ್ರಿಸ್ತಪೂರ್ವ ನಾಲ್ಕನೇ ಶತಮಾನದ ಯುವ ಬೌದ್ಧ ಸನ್ಯಾಸಿ ಹರಿಶಂಕರ ಮತ್ತು ಗುರುಕುಲವೊಂದರ ವಿದ್ಯಾರ್ಥಿ ಗೌತಮ ನೀಲಾಂಬರ ಸಾಕೇತದ ಕಾಡೊಂದರಲ್ಲಿ ಭೇಟಿಯಾಗುವುದರೊಂದಿಗೆ ಪ್ರಾರಂಭವಾಗುವ ಕಾದಂಬರಿ, ಮೌರ್ಯರ ಆಳ್ವಿಕೆ, ಮೊಘಲರು, ಆಂಗ್ಲರನ್ನು ದಾಟಿಕೊಂಡು, ಸ್ವಾತಂತ್ರ್ಯ, ದೇಶದ ಇಬ್ಭಾಗ, ಆನಂತರದ ಪರಿಸ್ಥಿತಿಗಳವರೆವಿಗೆ ಬಂದುನಿಂತು ಆಧುನಿಕ ಹರಿಶಂಕರ ಮತ್ತು ಗೌತಮ ನೀಲಾಂಬರರು ಅದೇ ಜಾಗದಲ್ಲಿ ಬೇರೊಂದು ಶತಮಾನದಲ್ಲಿ ಬೇರಾರಂತೆಯೊ ಭೇಟಿಯಾಗುವುದರೊಂದಿಗೆ ಕೊನೆಗೊಳ್ಳುತ್ತದೆ. ಮಧ್ಯದಲ್ಲಿ ಬರುವ ಕಮಲ್, ಚಂಪಾ, ನಿರ್ಮಲಾ, ಯಕ್ಷಿಣಿಯ ಮೂರ್ತಿ, ಸರಯೂನದಿ ಮುಂತಾದ ಪಾತ್ರಗಳು ಗೌತಮ, ಹರಿಯರಂತೆಯೆ ಬದಲಾಗುವ ಪ್ರತಿ ಕಾಲಘಟ್ಟದಲ್ಲಿಯೂ ಬೇರೆಬೇರೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇದರೆಲ್ಲದರ ಮಧ್ಯೆ ಹರಿಯುವುದು ಇತಿಹಾಸ. ಕುರ್ರತುಲೈನರಿಗೆ  ಸಲ್ಲಬೇಕಾದ ವಿಶ್ವವಿಖ್ಯಾತಿ ತಡವಾಗಾದರು ಆಕೆ ಬದುಕಿದ್ದಾಗಲೆ ದೊರಕಿದ್ದು ಸಂತಸದ ವಿಚಾರ.

ಇದಲ್ಲದೆ ಹೈದರ್ ಬರೆದಿರುವ, ಕಥೆಗಳು, ನಾಟಕ ಇತ್ಯಾದಿಗಳನ್ನು ಓದುತ್ತಿದ್ದರೆ ಆಕೆಯ ಯೋಚನೆ ಎಷ್ಟು ‘ಗ್ಲೋಬಲ್’ ಆಗಿತ್ತು ಎಂದು ಅನ್ನಿಸತೊಡಗುತ್ತದೆ. ಆಕೆಯ ರಚನೆಗಳನ್ನು ‘ಮುಸ್ಲಿಂ ಮಹಿಳಾ ಸಾಹಿತ್ಯ’ ಎಂದು ಬ್ರ್ಯಾಂಡ್ ಮಾಡುವಂತೆಯೆ ಇಲ್ಲ. ಮದುವೆಯಾಗದೆ ಉಳಿದ ಹೈದರ್ ಬಹಳ ‘ಮೂಡೀ’ ವ್ಯಕ್ತಿಯೆನಿಸಿದರು ಸಾಹಿತ್ಯದ ಬಗ್ಗೆ ಸಂವಾದ ನಡೆಸುವುದೆಂದರೆ ಸಂತಸದಿಂದ ತಯಾರಾಗಿಬಿಡುತ್ತಿದ್ದರು. ಅವರ ಪತ್ರಿಕೋದ್ಯಮಿ ಗೆಳೆಯರ ಬಳಗದಲ್ಲಿ ಸದಾ ತನ್ನ ಹೊಳಹುಗಳ ಆಣಿಮುತ್ತುಗಳನ್ನುದುರಿಸುತ್ತ ಜನಪ್ರಿಯವಾಗಿದ್ದರು. ಕ್ಯಾಲಿಫೋರ್ನಿಯಾ, ವಿಸ್ಕಾನ್ಸಿನ್, ಶಿಕಾಗೋ ಮೊದಲಾದ ಹಲವಾರು ವಿಶ್ವವಿದ್ಯಾನಿಲಯಗಳ ಸಂದರ್ಶಕ ಪ್ರಾಧ್ಯಾಪಕಿಯಾಗಿದ್ದ ಹೈದರ್ ಗಳಿಸಿದ ಪ್ರಶಸ್ತಿಗಳು - ಪದ್ಮಶ್ರೀ, ಪದ್ಮಭೂಷಣ, ಜ್ಜಾನಪೀಠ, ಸಾಹಿತ್ಯ ಅಕಾಡೆಮಿ, ಸೋವಿಯೆತ್ ಲ್ಯಾಂಡ್ ನೆಹರೂ, ಗಾಲಿಬ್ - ಒಂದೇ ಎರಡೇ?

ಜೀವನವನ್ನು ತನ್ನದೆ ರೀತಿಯಲ್ಲಿ ವ್ಯಾಖ್ಯಾನಿಸಿ, ಅದೇ ರೀತಿ ಬಾಳಿದ ನನ್ನ ‘ಆನಿ’ ಆಪಾ ಇಂದು ಇಲ್ಲ. ನನಗೆ ಅದನ್ನು ಜೀರ್ಣ ಮಾಡಿಕೊಳ್ಳಲಾಗುತ್ತಿಲ್ಲವೊ, ಅಥವಾ ನಾನೆ ಕೊರಡಿನ ತರಹ ಆಗಿದ್ದೇನೊ ತಿಳಿಯುತ್ತ ಇಲ್ಲ. ಸುಮ್ಮನೆ ಅಡ್ಡಾಡಿಕೊಂಡಿದ್ದೇನೆ, ಆಕೆಯ ನೂರಾರು ಪಾತ್ರಗಳ ವೈಭವಯುತ ಮೆರವಣಿಗೆಯ ನಡುವೆ ಎಲ್ಲೊ. ಅಲ್ಲೆ ಒಮ್ಮೆಯಾದರು ಆಕೆಯನ್ನು ಭೇಟಿಯಾಗಬಹುದು ಎಂಬ ಆಸೆ ಹೊತ್ತು.
 

ಚಿತ್ರಕೃಪೆ: ಜ್ಜಾನ

www.i16.tinypic.com/520td79.jpg

Comments (13)

ಕುವೆಂಪು ಮತ್ತು ನನ್ನ ಬದಲಾದ ‘ಇಮೇಜು’

ಯುನಿವರ್ಸಿಟಿಯಲ್ಲಿದ್ದಾಗ ನಮ್ಮ ಬೈಠಕ್ಕುಗಳು, ಗಲಾಟೆ, ಗೆಳೆತನ, ಪ್ರೇಮ, ವಿರಸ, ಗಾಸಿಪ್ ಏನು ನಡೆಯಬೇಕೆಂದರು ಕ್ಯಾಂಪಸ್ಸಿನ ಕುವೆಂಪುರವರ ದೊಡ್ಡದಾದ ಮೂರ್ತಿಯ ಸುತ್ತಮುತ್ತಲೆ ನಡೆಯಬೇಕಿತ್ತು. ಕ್ಯಾಂಪಸ್ಸಿಗೆ ಹೊಸತಾಗಿ ಬಂದ ಜೂನಿಯರ್ ಬ್ಯಾಚಿನ ಹುಡುಗಿಯರನ್ನು ನೋಡಲು ಠಳಾಯಿಸುವ ಹುಡುಗರು, ಶೇಷಣ್ಣನ ಕ್ಯಾಂಟೀನಿನಲ್ಲಿ ಟೀ ಕುಡಿದುಕೊಂಡು ಮಶ್ಕಿರಿ ಮಾಡಿಕೊಂಡು ಕಾಲಕಳೆಯುವ ಗೆಳೆಯರ ಗುಂಪುಗಳು, ಮೈದಾನದಲ್ಲಿ ಆಡುವವರ ಕೇಕೆ, ಸುಮ್ಮನೆ ಕಲ್ಲುಬೆಂಚುಗಳ ಮೇಲೆ ಕೂತು ಹರಟೆ ಕೊಚ್ಚುವವರು, ಇಬ್ಬಿಬ್ಬರೆ ಅಲ್ಲಿಇಲ್ಲಿ ಓಡಾಡಿಕೊಂಡು ತಾವು ಪ್ರೇಮಿಗಳೆಂದು ಸಾರುವ ಜೋಡಿಗಳು..ಹಾಗೂ ಇದನ್ನೆಲ್ಲ ಮೌನವಾಗಿ ನಿಂತು ನೋಡುವ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪನವರು.

ನಾವು ಹೊಸತಾಗಿ ಕ್ಯಾಂಪಸ್ಸಿಗೆ ಬಂದಾಗ ಅಲ್ಲಿನ ಇತರ ಎಲ್ಲ ಕಟ್ಟಡ, ಜನರು ಹಾಗೂ ಮರಗಿಡಗಳ ಜತೆಗೇ ಕುವೆಂಪುರವರೂ ನಿಗೂಢವಾಗಿ ಕಂಡಿದ್ದರು. ಅವರಿರುವ ದೊಡ್ಡ ಕಲ್ಲುಕಟ್ಟೆ ಸೀನಿಯರುಗಳ ಸ್ವತ್ತಾಗಿದ್ದಿದ್ದೂ ಒಂದು ಬಲವಾದ ಕಾರಣ. ಸಂಜೆಗಳಲ್ಲಿ ಆರಾಮವಾಗಿ ಕುವೆಂಪುರವರ ಕಾಲಬುಡದಲ್ಲಿ ಕೂತುಕೊಂಡು ಅವರು ನಡೆಸುವ ಮಾತುಕತೆಗಳ ಬಗ್ಗೆ ನಮಗೆ ಎಲ್ಲಿಲ್ಲದ ಕುತೂಹಲ. ಆದರೆ ನಾವೇನಾದರೂ ಅಪ್ಪಿತಪ್ಪಿ ಆ ಕಟ್ಟೆಯ ಮೆಟ್ಟಿಲು ಹತ್ತಿದರೂ ಸೀನಿಯರುಗಳ ಕೆಂಗಣ್ಣಿಗೆ ಗುರಿಯಾಗುವ ಭಯ. ನಾವುಗಳು ಸ್ವಲ್ಪ ನಿರ್ಭಿಡೆಯಿಂದ ನಡೆದುಕೊಂಡರೆ ನಮ್ಮ ವಿಭಾಗಗಳಲ್ಲಿ ಹೊಸಬರಿಗೆ ನೀಡಲಾಗುವ ‘ವೆಲ್ಕಂ’ ಸಮಯದಲ್ಲಿ ತೊಂದರೆಯಾಗಬಹುದು ಎಂದು ಎಲ್ಲರು ಮಾತನಾಡಿಕೊಳ್ಳುತ್ತಿದ್ದರು. ಅದಕ್ಕೆ ತಕ್ಕಂತೆ ಹಿರಿಯ ವಿದ್ಯಾರ್ಥಿಗಳೂ ಕೂಡ (ಮೊದಲ ಕೆಲವು ದಿನಗಳವರೆಗೆ..)ನಾವು ಕಂಡರೂ ಕಾಣದಂತೆ ವರ್ತಿಸುತ್ತಿದ್ದರು.

ಹೀಗಿರುವಾಗ ಒಂದು ದಿನ ಹೀಗಾಯಿತು. ನಾನು ಕವಿತೆ ಬರೆಯುತ್ತೇನೆ ಎಂದು ನಮ್ಮ ವಿಭಾಗದ ಒಬ್ಬ ಸೀನಿಯರ್ ವಿದ್ಯಾರ್ಥಿಗೆ ತಿಳಿದುಬಂತು. ಅವ ಹೌದೆ ಎಂದು ಕೇಳಿದ. ನಾನು ಹೂಂ ಎಂದೆ. ಆತನೂ ಚೆನ್ನಾಗಿ ಬರೆಯುತ್ತಾನೆಂದು ಹೆಸರಿದ್ದುದರಿಂದ ನಾನು ನನ್ನ ಬರಹದ ಕೆಲವು ಸ್ಯಾಂಪಲ್ಲುಗಳನ್ನು ಆತನಿಗೆ ತೋರಿಸುವುದೆಂದು ತೀಮರ್ಮಾನವಾಯಿತು. ಸಂಜೆ ನನ್ನ ಒಂದೆರಡು ಕವನಗಳನ್ನು ಆತನಿಗೆ ಲೈಬ್ರರಿಯಲ್ಲಿ ಕೊಟ್ಟೆ. ಆತ ಅವನ್ನು ಓದಿ, ‘ನಾನು ನಿನ್ನ ಕವನಗಳ ಬಗ್ಗೆ ಒಂದೆರಡು ಮಾತು ಹೇಳಬೇಕಿದೆ.’ ಎಂದ. ಸರಿ ಎಂದು ಮಾತನಾಡುತ್ತ ಲೈಬ್ರರಿಯಿಂದ ಹೊರಗೆ ಬಂದು ಕುಳಿತೆವು. ಕವಿತೆಗಳ ನಡುವೆ ಸಮಯ ಕಳೆದದ್ದೆ ತಿಳಿಯಲಿಲ್ಲ. ಚರ್ಚೆ ಮುಗಿಯಿತು. ನಾವು ಅಲ್ಲಿಯತನಕ ಕೂತದ್ದು ಕುವೆಂಪು ಕಟ್ಟೆಯ ಮೇಲೆ ಎಂದು ಆಗ ನನಗೆ ಅರಿವಾಯಿತು. ಸುಮಾರುಜನ ಹಿರಿಯ ಹಾಗು ನನ್ನ ಬ್ಯಾಚಿನ ವಿದ್ಯಾರ್ಥಿಗಳು ನನ್ನನ್ನು ವಿಚಿತ್ರವಾಗಿ ನೋಡುತ್ತ ಇದ್ದರು. ನಾನು ಒಳೊಳಗೆ ಸಣ್ಣ ಆತಂಕವಿದ್ದರೂ ಏನೂ ಆಗಿಲ್ಲವೆಂಬಂತೆ ಆರಾಮವಾಗಿ ಹಾಸ್ಟೆಲ್ಲಿಗೆ ಹೋದೆ.

ರಾತ್ರಿ ಊಟದ ವೇಳೆ ಸುಮಾರು ಗೆಳತಿಯರು ಬಂದು ನನ್ನ ಧೈರ್ಯವನ್ನು ಅಭಿನಂದಿಸಿದರು. ಕೆಲವರು ನಾನು ಅಲ್ಲಿ ಕೂತದ್ದು, ಅದೂ ಒಬ್ಬ ಸೀನಿಯರ್ ಹುಡುಗನೊಡನೆ -  ಸರಿಯಲ್ಲವೆಂದೂ, ನನ್ನ ಇಮೇಜಿಗೆ ತೊಂದರೆಯಾಗಬಹುದೆಂದೂ ಮಾತನಾಡಿದರು. ನನ್ನದೊಂದು ‘ಇಮೇಜು’ ಕೂಡ ಇತ್ತು ಹಾಗೂ ಅದು ಸಂಜೆಯ ನಂತರ ಬದಲಾಯಿತು ಎಂದು ನನಗೆ ತಿಳಿಯಿತು. ಕೆಲವು ಹಿರಿಯ ಹುಡುಗಿಯರು ನನ್ನ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದು ನನ್ನ ಕಿವಿಗೆ ಬಿತ್ತು.

ನಾನು ಮಾರನೆಯ ದಿನ ಸಂಜೆ ಒಂದು ಕೆಲಸ ಮಾಡಿದೆ. ನನ್ನ ಶಿವಮೊಗ್ಗೆಯಿಂದ ಬರುವ ಕೆಲವು ಸ್ನೇಹಿತೆಯರೊಡನೆ ಬೇಕೆಂದೆ ಕಟ್ಟೆಯ ಮೇಲೆ ಕುಳಿತು ಅವರ ಬಸ್ಸು ಬರುವ ತನಕ ಹರಟೆ ಹೊಡೆದೆ. ಅವರು ನನ್ನ ತರಲೆಯನ್ನೆಲ್ಲ ಖುಶಿಯಾಗಿ ಆನಂದಿಸಿ ಹೋದರು. ಮಾರನೆಯ ದಿನ ನನ್ನ ಕ್ಲಾಸಿನ ಸ್ನೇಹಿತೆಯರನ್ನು ಎಳೆದುಕೊಂಡು ಹೋದೆ. ಬಹಳ ಗಾಬರಿಯಾದರೂ ಅವರಿಗೂ ಒಂದು ಬಗೆಯ ಥ್ರಿಲ್ಲೆನಿಸಿತು. ಆಮೇಲೆ ನಾವು ಯಾರ ಪರಿವೆಯೂ ಇಲ್ಲದೆ ಕುವೆಂಪುರವರ ಬಳಿ ಕೂರಲಾರಂಭಿಸಿದೆವು. ಮೆಲ್ಲಮೆಲ್ಲನೆ ಇತರ ಗೆಳೆಯರೂ ಶಾಮೀಲಾದರು. ಆಮೇಲೆ ನಮ್ಮ ಮಾಸ್ಟರ್ಸ್ ಕೋರ್ಸು ಮುಗಿಯುವವರೆಗೂ ನಮ್ಮ ಸಂಜೆಗಳ ಕವಿತಾವಾಚನಗಳಲ್ಲಿ, ಚರ್ಚೆ, ಗುದ್ದಾಟ, ಹರಟೆ, ಸಂಭ್ರಮಗಳಲ್ಲಿ ಕುವೆಂಪುರವರ ದಿವ್ಯಮೌನ ಇದ್ದೇ ಇರುತ್ತಿತ್ತು. ಏನೆ ಇರಲಿ, ನಾನು ಅಂದು ಮೊದಲ ಬಾರಿಗೆ ಆ ಕಟ್ಟೆಯ ಮೇಲೆ ಪರಿವೆಯಿಲ್ಲದೆ ಅಚಾನಕ್ಕಾಗಿ ಕೂತದ್ದು, ಆ ಮೂಲಕ ಒಂದು ಸಣ್ಣ ನಿಯಮವನ್ನು ಮುರಿದದ್ದು ನನ್ನ ‘ಇಮೇಜ’ನ್ನು ಬದಲಾಯಿಸಿದ್ದಂತೂ ಸತ್ಯ.

ಚಿತ್ರಕೃಪೆ: www1.istockphotos.com
 

Comments (11)

ನೀನಾವೆಡೆ ಓಡುತ್ತಿರುವೆ, ಓ ಪಾಪಿ ಮನುಷ್ಯನೆ.


ಆಂಖೋನ್ ಕೆ ಸಾಗರ್
ಹೋಂಟೋನ್ ಕೆ ಸಾಗರ್
ಲೇ ಡೂಬೇ ಹಮೇ…

ಪಾಕಿಸ್ತಾನ ಮೂಲದ ‘ಫ್ಯೂಜೋನ್’ ಬ್ಯಾಂಡಿನ ಹಾಡು ಕೇಳುತ್ತ ಮೈಮರೆತಿದ್ದೇನೆ. ಮನೆಯವರೆಲ್ಲ ಬೇಸತ್ತುಹೋಗಿ ಈಗೀಗ ಊಟಕ್ಕೆ, ತಿಂಡಿಗೆ ಕರೆಯುವುದನ್ನು ಕೂಡ ಬಿಟ್ಟುಬಿಟ್ಟಿದ್ದಾರೆ. ನನಗೆ ಆಗಾಗ ತಗುಲಿಕೊಳ್ಳುವ ದರವೇಶಿತನದ ರೋಗ ಕಳೆದ ತಿಂಗಳಿನಿಂದ ಜಾಸ್ತಿಯಾಗಿರುವುದೇ ಇದಕ್ಕೆ ಕಾರಣ ಎಂದು ನನ್ನ ಭಾವನೆ. ಹೀಗಾದಾಗೆಲ್ಲ ವಟವಟ ಎಂದು ಸಾಮಾನ್ಯವಾಗಿ ತಿರುಗುತ್ತಿರುವ ನನ್ನ ಮಾತು ಕಡಿಮೆಯಾಗುತ್ತದೆ. ಊಟತಿಂಡಿಗಳ ಪರಿವೆ ಇರುವುದಿಲ್ಲ. ಇದ್ದಕ್ಕಿದ್ದಹಾಗೆ ಏನೋ ನೆನೆಸಿಕೊಂಡು ಎದ್ದುಹೋಗಿಬಿಡುತ್ತೇನೆ. ಮಧ್ಯರಾತ್ರಿಯಲ್ಲಿ ಎದ್ದುಕೂತು ಹಾಡು ಗುನುಗುವುದೋ, ಕೇಳುವುದೋ, ಇಲ್ಲವೇ ದೀಪ ಹಚ್ಚಿಕೊಂಡು ಬರೆಯುವುದೋ ಮಾಡುತ್ತ ಇರುತ್ತೇನೆ. ನನ್ನವ ಒಂದು ನಿಟ್ಟುಸಿರು ಬಿಟ್ಟು ನಕ್ಕು ಮಗ್ಗುಲು ಬದಲಾಯಿಸಿ ತನ್ನ ಮಗುವಿನಂತಹ ನಿದ್ದೆಗೆ ಜಾರುತ್ತಾನೆ. ಅವನೊಬ್ಬನಿಗೆ ಮಾತ್ರ ಇದೆಲ್ಲ ಚೆನ್ನಾಗಿ ಅರ್ಥವಾಗುತ್ತದೆ.

ಎಂಟು ವರ್ಷಗಳ ಹಿಂದೆ ಇದೇ ಸಮಯದಲ್ಲಿ ಮೈಸೂರಿನ ರೆಸ್ಟುರಾವೊಂದರ ಮೂಲೆಯಲ್ಲಿ ಕೂತು ನಾನು ಆತನಲ್ಲಿ ಇದುವರೆಗೆ ಏನು ಕಂಡೆ, ಇದರಿಂದ ನನಗೇನು ಫಾಯಿದೆ ಎಂದು ಮುಂತಾಗಿ ಒಂದು ಕ್ಷಣವೂ ತೂಕಹಾಕಲು ಹೋಗದೆ ಸುಮ್ಮನೆ ಒದರಿದ್ದೆ - ’ನನಗೆ ಇದೆಲ್ಲ ಸಾಕಾಗಿದೆ, ಯಾವಾಗ ಮದುವೆಯಾಗೋಣ?’ ಆತ ರೆಪ್ಪೆಯನ್ನೂ ಮಿಟುಕಿಸದೆ ಅದೇ ಪ್ರಶ್ನೆಗೋಸ್ಕರ ವರುಷಗಳಿಂದ ಕಾಯುತ್ತ ಇದ್ದವನಂತೆ ಸಣ್ಣಗೆ ನಕ್ಕಿದ್ದ. ಆತ ಧರಿಸಿದ್ದ ಕಪ್ಪು ಟೀಶರ್ಟಿನ ಮೇಲಿದ್ದ ‘ಸ್ಪೀಡ್ ಡೆಮನ್’ ಎಂಬ ಗಾಥಿಕ್ ಶೈಲಿಯ ಲೇಬಲ್ಲನ್ನೆ ದಿಟ್ಟಿಸುತ್ತ ಆತಂಕದಿಂದ ಅವನ ಉತ್ತರಕ್ಕೆ ಕಾಯುತ್ತಿದ್ದ ನನಗೆ ಲೈಫಿನಲ್ಲಿ ಮೊದಲ ಬಾರಿಗೆ ಗಲಿಬಿಲಿ ತುಂಬಿದ ನಾಚಿಕೆಯಂಥ ಭಾವನೆಯಾಗಿತ್ತು. ‘ಓ ಮೆರೇ ದಿಲ್ ಕೆ ಚೈನ್.. ಚೈನ್ ಆಯೆ ಮೆರೆ ದಿಲ್ ಕೊ ದುವಾ ಕೀಜಿಯೇ..’ ನೆನಪಾಗಿ ನಕ್ಕಿದ್ದೆ. ಆಗ ಧ್ವನ್ಯಾಲೋಕದಲ್ಲಿ ಪೇಯಿಂಗ್ ಗೆಸ್ಟ್ ಆಗಿದ್ದ ನನಗೆ ಪ್ರೊ.ಸಿಡಿಎನ್ ಒಂದು ಮುಂಜಾವ ಜತೆಕೂತು ಟೀ ಕುಡಿಯುತ್ತಿರುವಾಗ ಅ ಹುಡುಗ ಯಾರು ಎಂದು ಸೂಕ್ಷ್ಮವಾಗಿ ಕೇಳಿದರು. ಇತರರಿಂದ ಅವರ ಮೂಡುಗಳ ಬಗ್ಗೆ ತರತರಹದ ಕಥೆಗಳನ್ನು ಕೇಳಿ ಬೇಕಾದಷ್ಟು ವಾರ್ನಿಂಗುಗಳನ್ನು ಅದಾಗಲೇ ಪಡೆದಿದ್ದ ನಾನು ಬೆವೆತುಹೋಗಿದ್ದೆ. ಆದರೆ ಸುಳ್ಳುಹೇಳಲು ಧೈರ್ಯಬರದೆ ಉಗುಳುನುಂಗುತ್ತ ನಿಜ ಹೇಳಿಬಿಟ್ಟೆ. ಎಲ್ಲವನ್ನೂ ತಲೆಯಾಡಿಸುತ್ತ ಕೇಳಿದ ಅವರು ’ಮೈಸೂರಿನಲ್ಲಿ ಒಬ್ಬಳೆ ಇರುತ್ತಿದ್ದೀಯ, ಹುಷಾರಾಗಿರು’ ಎಂದಷ್ಟೆ ಹೇಳಿ ಯಾವುದೋ ಪತ್ರ ಬರೆಯಲು ಕುಳಿತರು. ಬದುಕಿದೆಯಾ ಬಡಜೀವವೆ ಎಂದು ಅಲ್ಲಿಂದ ಓಟಕಿತ್ತೆ. ನನ್ನ ತಂದೆತಾಯಂದಿರ ಒಪ್ಪಿಗೆಯಿಲ್ಲದೆಯೆ ಮದುವೆ ನಿಶ್ಚಯವಾದಾಗ ಪ್ರೊಫೆಸರರ ಆಶೀರ್ವಾದ ಪಡೆಯಲು ಹೋಗಿದ್ದೆವು. ಪ್ರೊ.ಸಿಡಿಎನ್ ಮತ್ತು ಅವರ ಪತ್ನಿಯವರು ಆಶೀರ್ವದಿಸಿ ನನ್ನ ತಂದೆತಾಯಂದಿರನ್ನು ಒಲಿಸಿಕೊಳ್ಳಬೇಕೆಂದು ಬುದ್ಧಿವಾದ ಹೇಳಿದರು. ನಾನೂ ಇವನೂ ಮುಖಮುಖ ನೋಡಿಕೊಂಡು ಸುಮ್ಮನಾಗಿದ್ದೆವು.

ಬೆಳಜಾವ ನಾಲ್ಕು ಗಂಟೆ. ಇದನ್ನೆಲ್ಲ ಥೇಟು ದರವೇಶಿಯ ಥರ ಧ್ಯಾನಿಸಿಕೊಂಡು ಕುಳಿತಿದ್ದೇನೆ. ಮಗಳು ಕನಸು ಕಾಣುತ್ತ ‘ಸುಂ ಸುಂ ಸಾ.. ಜೇನುನೊಣ ಬಾ..’ ಎಂಬ ಹಾಡೊಂದನ್ನು ಜೊಲ್ಲುಸುರಿಯುವ ಬಾಯಲ್ಲಿ ತೊದಲುತ್ತ ಇದ್ದಾಳೆ. ನನಗೆ ಇವಳು ನನ್ನ ತರಹವೇನೇ ಎನ್ನಿಸಿ ಸ್ಥಬ್ದಳಾಗಿದ್ದೇನೆ. ಇಲ್ಲಿಯವರೆಗಿನ ನನ್ನ ಕೋಪ, ತಟವಟ, ಹುಚ್ಚುತನಗಳನ್ನೆಲ್ಲ ಸಾವಿರಾರುಸಾರಿ ತಡೆದು, ಜ್ವರಗಳಲ್ಲಿ ಅಮ್ಮನಂತೆ ಸಂತಯಿಸಿ, ಮಲಗುವ ಮುನ್ನ ಮೂಗಿಗೆ ಟೈಗರ್ ಬಾಮು ಹಚ್ಚದಿದ್ದರೆ ಮಾರನೆ ದಿನ ಮಾತು ಬಿಡುವವನ ಪ್ರೀತಿ ಎಂದಿಗೂ ನನಗೆ ಅರ್ಥವಾಗದು ಅನ್ನಿಸುತ್ತದೆ. ಕೆಲಕಾಲದ ಹಿಂದೆ ಮೈಸೂರಿನಲ್ಲಿ ಸ್ನೇಹಿತನೊಬ್ಬನ ಮೇಲೆ ತೀರಾ ಇಂಪಲ್ಸಿವ್ ಆಗಿ ಕೋಪಮಾಡಿಕೊಂಡು ಜಗಳವಾಡಿ ಮೊಬೈಲು ಸ್ವಿಚ್ ಆಫ್ ಮಾಡಿಕೊಂಡು ದಿನವೆಲ್ಲ ಸುಮ್ಮನೆ ಬೀದಿಗಳಲ್ಲಿ ಅಲೆದಾಡಿ, ’ಯು ಆರ್ ಬಿಹೇವಿಂಗ್ ಲೈಕ್ ಅ ರೆಚೆಡ್ ವುಮನ್’ ಎಂದು ಮುಂತಾಗಿ ಬಲ್ಲವರೊಬ್ಬರ ಕೈಲಿ ಬೈಯಿಸಿಕೊಂಡ ಮೇಲೆ ಹಗುರವೆನ್ನಿಸಿ ಸುಮ್ಮನಾದ ಹೆಣ್ಣು ನಾನು. ನನ್ನ ಪುನಃ ಪುನಃ ತಪ್ಪುಗಳನ್ನ ಮಾಡಿ ಯಾರ ಕೈಲಾದರು ಬಾಯಿಗೆ ಬಂದಹಾಗೆ ಅನ್ನಿಸಿಕೊಳ್ಳುವ ಬುದ್ಧಿ.

ಕಿವಿಗಳಲ್ಲಿ ‘ಜಿ. ಲವ್’ ಎಂಬ ಗಾಜಿನಂಥ ಕಣ್ಣುಗಳ ಸ್ಫುರದ್ರೂಪಿ ಹಾಡುಗಾರ ಹಾಡಿರುವ ‘ಓ ಸಿನರ್ ಮ್ಯಾನ್, ವೇರ್ ಡು ಯು ರನ್ ಟು?’ ಎಂಬ ಹಾಡು ಸುಮ್ಮನೆ ಓಲಾಡುತ್ತಿದೆ.

ಚಿತ್ರಕೃಪೆ: www.thebiscuitfactory.com  
 

Comments (9)

ಹೀಗೆ ಯೋಚಿಸುವುದು ತಪ್ಪೋ ಸರಿಯೊ?

 

ಕೆಲವೊಂದು ವಿಷಯಗಳು ಬೇಡವೆಂದರು ನಮ್ಮ ಮೆದುಳಿನೊಳಗೆ ಅಚ್ಚೊತ್ತಿದ ಹಾಗೆ ಕೂತುಬಿಡುತ್ತವೆ. ಮರೆಯಲೇ ಆಗದು. ‘ಅದೆಷ್ಟು ಹಳೇದನ್ನೆಲ್ಲ ನೆನಪಿಡ್ತೀ!’ ಎನ್ನುವ ನನ್ನ ಸ್ನೇಹಿತರಿಗೆ ನಾನು ವಿಪರೀತ ಮರೆಯುವುದು ನಾನು ಬೇಕೆಂದೇ ಮಾಡುವ ತಮಾಷೆ ಎಂದು ಎಷ್ಟೋ ಸಾರಿ ಅನಿಸಿದ್ದಿದೆ. ಇದು ನನಗೂ ಬಿಡಿಸಲಾರದ ಕಗ್ಗಂಟು. ಹಾಗೆ ನಾನು ನೆನಪಿಟ್ಟುಕೊಂಡಿರುವ ಒಂದು ದಿನ ಎಂದರೆ ನಾನು ಒಂದನೆ ಕ್ಲಾಸಿಗೆ ಸೇರಿದ ದಿನ.

ಕ್ಲಾಸಿನೊಳಗೆ ಟೀಚರೊಬ್ಬರು ಬಂದರು. ಕೆಂಪುಬಣ್ಣದ ಒಡಲಿನ ಮೇಲೆ ಬಿಳಿಯ ಪೋಲ್ಕಾಡಾಟುಗಳಿದ್ದ ಸೀರೆಯುಟ್ಟಿದ್ದ ಅವರು ನನಗೆ ವಿಚಿತ್ರವಾಗಿ ಕಂಡುಬಂದು ನಾನು ಅವರನ್ನೆ ಪಿಳಿಪಿಳಿ ಕಣ್ಣುಬಿಡುತ್ತ ನೋಡುತ್ತಿದ್ದೆ. ಒಂದು ರಿಜಿಸ್ಟರು ಬಿಚ್ಚಿದ ಅವರು, ‘ಮಕ್ಕಳೆ, ಒಬ್ಬೊಬ್ಬರಾಗಿ ನಿಮ್ಮ ನಿಮ್ಮ ಹೆಸರು, ತಂದೆಯ ಹೆಸರು, ಜಾತಿ ಹೇಳಿ ನೋಡೋಣ! ‘ ಅಂದರು. ‘ನೀನು ಯಾವ ಜಾತಿ? ‘ ನನ್ನ ಪಕ್ಕದಲ್ಲಿ ಕೂತಿದ್ದ ಹುಡುಗಿಯೊಬ್ಬಳು ನನ್ನನ್ನು ಕೇಳಿದಳು. ನಾನು ಅವಳನ್ನು ತಿರುಗಿ ಕೇಳಿದೆ, ‘ಹಂಗಂದ್ರೆ? ‘ ನನಗೆ ಆಗ ನಿಜಕ್ಕೂ ಗಾಬರಿಯಾಯಿತು. ಏನು ಹೇಳುವುದು? ಜಾತಿ ಅಂದರೆ ಏನಿರಬಹುದು? ಆ ವೇಳೆಗಾಗಲೆ ನನಗೆ ಕನ್ನಡ ಚೆನ್ನಾಗಿ ಓದಲು ಬರೆಯಲು ಬರುತ್ತಿತ್ತು. ದಿನಪತ್ರಿಕೆ, ಮ್ಯಾಗಜೀನುಗಳನ್ನು ಅರ್ಥವಾಗದಿದ್ದರು ಸ್ಪಷ್ಟವಾಗಿ ಓದುತ್ತಿದ್ದೆ. ಅಮ್ಮ ಮಗಳು ಕಲಿಯಲಿ ಎಂದು ಆಗಷ್ಟೆ ಆಂಗ್ಲ ಕಲಿಸಲು ಆರಂಭಿಸಿದ್ದರು. ಅಗೊ, ನನ್ನ ಸರದಿ ಬಂದೇಬಿಟ್ಟಿತು. ನನ್ನ ಹೆಸರು ನನ್ನ ತಂದೆಯ ಹೆಸರು ಹೇಳಿ ಸುಮ್ಮನೆ ನಿಂತೆ. ಟೀಚರು ‘ಯಾವ ಜಾತಿ ಹೇಳು? ‘  ಅಂದರು. ನಾನು ಜೈಕಾರ ಹಾಕುವವಳ ಹಾಗೆ ಕೈ ಮೇಲೆತ್ತಿ ‘ನಾನು ಕನ್ನಡ ಇಂಗ್ಲಿಷ್ ಜಾತಿ! ‘ ಎಂದು ಘೋಷಿಸಿದೆ. ಟೀಚರು ಬಿದ್ದೂ ಬಿದ್ದೂ ನಗಲು ಪ್ರಾರಂಭಿಸಿಬಿಡಬೇಕೆ? ನನ್ನ ಪ್ರಕಾರ ನಾನು ಕಲಿಯುತ್ತಿದ್ದ ಭಾಷೆಯೆ ನನ್ನ ಜಾತಿಯಾಗಿತ್ತು. ಕೊನೆಗೆ ಟೀಚರು ‘ಮಗೂಗೆ ಜಾತಿ ಯಾವುದು ಅಂತ ಹೇಳಲಿಕ್ಕೆ ಗೊತ್ತಿಲ್ಲ. ಹೇಳಿಕೊಡಿ ‘ ಎಂದು ಅಮ್ಮನಿಗೆ ಹೇಳಿಕಳಿಸಿದರಂತೆ. ‘ಒಂದನೆ ಕ್ಲಾಸಿನ ಮಕ್ಕಳಿಗೆ ಜಾತಿ-ಗೀತಿ ಅಂತ ಕೇಳುವುದ್ಯಾಕಂತೆ? ಅವಕ್ಕೇನು ತಿಳಿಯತ್ತೆ ? ‘ ಎಂದು ಅವತ್ತು ಸಂಜೆ ಅಮ್ಮ ಜೋರಾಗಿ ರೇಗುತ್ತಿದ್ದರು. ‘ಈ ಹುಡುಗಿ ಲಿಟರೇಚರ್ ಓದತ್ತೆ ಅಂತ ಆವಾಗ್ಲೇ ಭವಿಷ್ಯ ಹೇಳಿಕೊಂಡುಬಿಟ್ಟಿತ್ತು! ‘ ಎಂದು ನೆನೆಸಿ ಈಗಲು ನಗುತ್ತಿರುತ್ತಾರೆ.

ನನಗೆ ಮಾತ್ರ ನನ್ನ ಪಕ್ಕ ಕೂತು ನನ್ನ ಜಾತಿ ಕೇಳಿದ ಹುಡುಗಿಯೆ ನೆನಪಾಗುತ್ತಾಳೆ. ಆಕೆಯ ಸಣ್ಣ ಪ್ರಶ್ನೆಯನ್ನ ನಾನು ಇನ್ನುವರೆಗೂ ಮರೆಯಲಾಗಿಲ್ಲ. ಒಂದನೆ ಕ್ಲಾಸಿಗೆ ಆಗಷ್ಟೆ ಕಾಲಿಟ್ಟಿದ್ದ ಪುಟ್ಟ ಹುಡುಗಿಯೊಬ್ಬಳು ಜಾತಿಯ ಬಗ್ಗೆ ಅರಿತಿರಬಹುದಾದರೆ ಎಷ್ಟರಮಟ್ಟಿಗೆ ಆ ಮಗುವಿನ ದೈನಂದಿನ ಜೀವನದಲ್ಲಿ ‘ಜಾತಿ’ ಎಂಬ ಪದ ಬಳಸಲ್ಪಟ್ಟಿರಬಹುದು? ಅದನ್ನು ಯಾವ ರೀತಿ ಆ ಮಗುವಿಗೆ ಆಕೆಯ ಹಿರಿಯರು ತಿಳಿಸಿಕೊಟ್ಟಿರಬಹುದು?

ನನಗೆ ಇವೆಲ್ಲ ಈಗಲು ತಿಳಿಯುವುದಿಲ್ಲ. ಭಾರತ ಒಂದು ಜಾತ್ಯತೀತ ರಾಷ್ಟ್ರವಾಗಿದೆ ಎಂದು ಏಳನೇ ಕ್ಲಾಸಿನ ಸಮಾಜಶಾಸ್ತ್ರ ಪಠ್ಯದಲ್ಲಿ ಎಂದೋ ಕಲಿತ ವಾಕ್ಯಕ್ಕೆ ನಾನು ಈವತ್ತು ಭೂತಕನ್ನಡಿಯೇನು ಮೈಕ್ರೋಸ್ಕೋಪಿಟ್ಟು ಹುಡುಕಿದರು ಪ್ರೂಫು ದೊರಕುವದಿಲ್ಲ. ಯಾವುದೆ ಅಪ್ಲಿಕೇಶನ್ನುಗಳಿಗೆ ಬಯೋಡಾಟಾ ಬರೆವಾಗ ನನ್ನ ರಾಷ್ಟ್ರೀಯತೆಯ ಬಗೆಗೆ ಬರೆವಾಗ ಎಷ್ಟು ಹೆಮ್ಮೆಯೆನಿಸುತ್ತದೋ ಅದೇ ಕಾಲಮ್ಮಿನ ಕೆಳಗೆ ನನ್ನ ಜಾತಿಯನ್ನು ನಮೂದಿಸಲೇಬೇಕಾಗಿ ಬಂದಾಗ ಅಷ್ಟೆ ಗಲಿಬಿಲಿ,ಹಿಂಸೆ ಆಗಿದ್ದಿದೆ. ಜಾತಿಗೆ ಬೆಲೆಕೊಡದೆ ಪ್ರೇಮೆವಿವಾಹವಾದ ನನ್ನಿಬ್ಬರು ಸ್ನೇಹಿತರ ಬಗ್ಗೆ ಇತರರು ಆಡಿದ ಕುಹಕದ ಮಾತುಗಳನ್ನು ಕೇಳಿ ಬೇಸರಿಸಿಕೊಂಡಿದ್ದೇನೆ. ಜಾತಿ ನೋಡಿ ಸ್ನೇಹ ಬೆಳೆಸುವವರು, ಪ್ರೇಮಿಸುವವರನ್ನು ನೋಡಿ ಅಚ್ಚರಿಯುಕ್ಕಿದ್ದಿದೆ. ಸ್ನೇಹಿತನೊಬ್ಬ ಜಾತಿಜಗಳವನ್ನು ಸಮರ್ಥಿಸಿ ಮಾತನಾಡಿದಾಗ ಆತ ಮನುಷ್ಯನೆ ಅಲ್ಲವೆನಿಸಿ ಅವತ್ತಿಗೇ ಆತನ ಜತೆ ಸ್ನೇಹಕ್ಕೆ ಒಂದು ಪೂರ್ಣವಿರಾಮ ಕೊಟ್ಟು ಸುಮ್ಮನಾಗಿದ್ದೇನೆ. ಮನೆಗೆ ಕರೆದು ನೀರು ಕೊಡುವ ಮುನ್ನ ಜಾತಿ ವಿಚಾರಿಸುವ ಮನೆಗಳಲ್ಲಿ ಏನೊ ನೆಪಹೂಡಿ ಊಟ ಮಾಡದೆ ಎದ್ದುಬಂದಿದ್ಡೇನೆ. ನೇರವಾಗಿ ಕೇಳುವ ಸೌಜನ್ಯ ತೋರಿದವರಿಗೆ ಅಷ್ಟೆ ನೇರವಾಗಿ ಅದು ತೀರ ಪರ್ಸನಲ್ ವಿಚಾರವೆಂದು ವಿವರಿಸಿ ಹೇಳಿದ್ದೇನೆ.

ನಾನು ಹೀಗೆ ಯೋಚಿಸುವುದು ತಪ್ಪೋ ಸರಿಯೊ ನನಗೆ ತಿಳಿದಿಲ್ಲ. ಆದರೆ ಭಕ್ತಿಯಿಂದ ದೇವಸ್ಥಾನಗಳಿಗೆ ಹೋಗಿಬರುವ ಹಿಂದೂಗಳಲ್ಲದ ಸ್ನೇಹಿತರನ್ನು ಕಂಡಿದ್ದೇನೆ. ಗುಟ್ಟಾಗಿ ಕುಂಕುಮ, ಸ್ಟಿಕರುಗಳನ್ನು ಹಣೆಗಿಟ್ಟುಕೊಂಡು ಸ್ನೇಹಿತೆಯರಿಗೆ ತೋರಿಸಿ ಸಂತಸಪಟ್ಟುಕೊಳ್ಳುವ ಮುಸಲ್ಮಾನ ಸ್ನೇಹಿತೆಯರನ್ನು ನೊಡಿದ್ದೇನೆ. ರಂಜಾನಿನ ತಿಂಗಳಲ್ಲಿ ತಮ್ಮ ಮುಸಲ್ಮಾನ ಸ್ನೇಹಿತೆಯರೊಡನೆ ಉಪವಾಸ ವ್ರತವಿಟ್ಟ ಮುಸಲ್ಮಾನರಲ್ಲದ ಹುಡುಗಿಯರು ನನಗೆ ಪರಿಚಯವಿದ್ದಾರೆ. ಪ್ರತೀ ಭಾನುವಾರ ಚರ್ಚಿಗೆ ಹೋಗಿ ಕ್ಯಾಂಡಲು ಹೊತ್ತಿಸಿ ಮಂಡಿಯೂರಿ ಬರುತ್ತಾಳೆ ಕ್ರಿಶ್ಚಿಯನ್ನಳಲ್ಲದೆ ನನ್ನ ಗೆಳತಿ. ತಾನು ಕಟ್ಟಾ ಸಸ್ಯಾಹಾರಿಯಾಗಿದ್ದೂ ಜತೆಗಿನ ಗೆಳೆಯರು ಮಾಂಸಾಹಾರ ಮಾಡುತ್ತ ಇದ್ದರೆ ಮುಖ ಸಿಂಡರಿಸಿಕೊಂಡು ಎದ್ದುಹೋಗದ ಗೆಳೆಯನ ಬಗ್ಗೆ ನನಗೆ ಅಪಾರ ಗೌರವವಿದೆ. ಇವರ ಪೈಕಿ ಯಾರ ಮನಸ್ಸಿನಲ್ಲು ಭೀಕರವಾದ ಆದರ್ಶಗಳಿಲ್ಲ, ಒಣ ಆಡಂಬರದ ಭಾವನೆಗಳು ಇವರ ಹತ್ತಿರವೂ ಸುಳಿದಿಲ್ಲ. ಆದರೆ ನಮ್ಮ ಸುತ್ತಮುತ್ತಲೂ ಇನ್ನೊಂದು ರೀತಿಯ ಹುಡುಗಹುಡುಗಿಯರು ಇದ್ದಾರೆ. ಭಿಡೆಯಿಲ್ಲದೆ ಎಲ್ಲರಂತೆ ನಕ್ಕುನಲಿಯುವ ಇವರು ತಂತಮ್ಮ ಜಾತಿ, ಧರ್ಮಗಳ ವಿಷಯ ಬಂದೊಡನೆಯೆ ರೇಜಿಗೆ ಹುಟ್ಟಿಸುವಷ್ಟು ಅಪರಿಚಿತರಾಗಿಬಿಡುತ್ತಾರೆ. ನನಗೆ ರಾಷ್ಟ್ರಪ್ರೇಮದ ಬಗೆಗಿನ ದೊಡ್ಡದೊಡ್ಡ ಮಾತುಗಳು ಅರ್ಥವಾಗುವದೇ ಇಲ್ಲ. ಅರ್ಥವಾಗುತ್ತಿರುವುದೇನೆಂದರೆ ಕೆಲವು ದಶಕಗಳ ಹಿಂದೆ ಇದ್ದಿರದ ಅಭದ್ರತೆಯ ಭಾವನೆ ಎಲ್ಲರನ್ನು ಕಾಡಿಸುತ್ತಿದೆ ಅನ್ನುವದು. ಅರ್ಥವಾಗುತ್ತಿರುವುದೇನೆಂದರೆ ಇನ್ನು ಕೆಲವೇ ವರುಷಗಳಲ್ಲಿ ನನ್ನ ಹಾಗೆ ಯೋಚಿಸುವವರು ಬಹುಶಃ ಐಡಿಯಲಿಸ್ಟ್ ರೆಲಿಕ್ಕುಗಳಾಗಿ ಉಳಿದುಹೋಗಬಹುದು ಅನ್ನುವದು.

ನನ್ನ ಮಗಳಿಗೆ ಅವಳ ಜಾತಿಯ ಬಗ್ಗೆ ಯಾರಾದರು ಕೇಳಿದರೆ ಅವಳು ಏನು ಉತ್ತರ ಕೊಡಬಹುದು? 

ಚಿತ್ರಕೃಪೆ: www.theharmonyinstitute.org
 

Comments (39)

« Previous entries